
ಬೆಳ್ತಂಗಡಿ: ವೇಶ್ಯಾವಾಟಿಕೆ ಶಂಕೆ– ಲಾಡ್ಜ್ಗಳ ಮೇಲೆ ಪೊಲೀಸರ ದಾಳಿ, ಇಬ್ಬರ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಬೆಳ್ತಂಗಡಿಯಲ್ಲಿನ ಕೆಲ ಲಾಡ್ಜ್ಗಳಲ್ಲಿ ವೇಶ್ಯಾವಾಟಿಕೆ ಚಟುವಟಿಕೆ ನಡೆಯುತ್ತಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪುರ ಮಠ್ ನೇತೃತ್ವದಲ್ಲಿ ರಾತ್ರಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ, ಉಜಿರೆ ಬಸ್ ನಿಲ್ದಾಣದ ಬಳಿ ಇರುವ ಶ್ರೀ ದುರ್ಗಾ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಸಲು ಯುವತಿಯನ್ನು ಕರೆತಂದಿರುವುದು ಬಹಿರಂಗಗೊಂಡಿದೆ. ಕೂಡಲೇ ಆ ಯುವತಿಯನ್ನು ಪೊಲೀಸರು ರಕ್ಷಿಸಿ ಸಮರ್ಪಕ ಸ್ಥಳಕ್ಕೆ ಕಳುಹಿಸಿದ್ದಾರೆ.
ಈ ಪ್ರಕರಣದಲ್ಲಿ ಲಾಡ್ಜ್ನ ಮ್ಯಾನೇಜರ್ ಸಾವ್ಯ ಗ್ರಾಮದ ಬಾರೆಗುಡ್ಡೆ ಸತೀಶ್ ಪೂಜಾರಿ (49) ಮತ್ತು ಕನ್ಯಾಡಿ ಗ್ರಾಮದ ನಿವಾಸಿ ಯೋಗಿಶ್ ಆಚಾರ್ಯ (49) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಲಾಡ್ಜ್ ಮಾಲೀಕ ಉಜಿರೆಯ ರಮೇಶ್ ಶೆಟ್ಟಿ, ಮ್ಯಾನೇಜರ್ ಸತೀಶ್ ಪೂಜಾರಿ ಮತ್ತು ಸಿಬ್ಬಂದಿ ಯೋಗಿಶ್ ಆಚಾರ್ಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ಮುಂದುವರಿದಿದೆ.