
ನೆಲಮಂಗಲ: ಒಂದೂವರೆ ತಿಂಗಳ ಗಂಡು ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ತಾಯಿ ಕೊಲೆ ಮಾಡಿದ ಭಯಾನಕ ಘಟನೆ ಬೆಂಗಳೂರು ಹೊರವಲಯದ ವಿಶ್ವೇಶ್ವರಪುರದಲ್ಲಿ ನಡೆದಿದೆ.
ಬಡತನ ಹಾಗೂ ಮಗುವಿನ ಜತೆಗೊಳ್ಳುವಿಕೆಯ ಕಷ್ಟದಿಂದ ಬೇಸತ್ತು ತಾಯಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಶೌಚಾಲಯದಲ್ಲಿ ನೀರು ಕಾಯುತ್ತಿದ್ದ ಹಂಡೆಯಲ್ಲಿ ತನ್ನ ಮಗುವನ್ನು ಮುಳುಗಿಸಿ ಕೊಂದ ಘಟನೆ ಸಾರ್ವಜನಿಕರಲ್ಲಿ ಆಘಾತ ಹುಟ್ಟಿಸಿದೆ.
ವಿಶ್ವೇಶ್ವರಪುರದಲ್ಲಿ ವಾಸಿಸುತ್ತಿದ್ದ ಪವನ್ ಮತ್ತು ರಾಧಾ ದಂಪತಿಗಳ ಗಂಡು ಮಗುವು ಘಟನೆಯ ಬಲಿ ಆಗಿದೆ. ತಡರಾತ್ರಿ ತಾಯಿ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಶಂಕೆ ಹಿನ್ನೆಲೆ, ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ತಾಯಿ ರಾಧಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆದಿದೆ. ಪತಿ ಪವನ್ ಆಟೋ ಚಾಲಕರಾಗಿದ್ದು, ಪ್ರತಿದಿನ ಮದ್ಯಪಾನ ಮಾಡುತ್ತಿದ್ದ ಮಾಹಿತಿ ಲಭ್ಯವಾಗಿದೆ. ದಂಪತಿಗಳ ನಡುವೆ ಗಲಾಟೆ ಮತ್ತು ಮನಸ್ತಾಪವಿತ್ತು ಎನ್ನಲಾಗುತ್ತಿದೆ.
ಮಗುವಿನ ಕೊಲೆಗೆ ನಿಖರವಾದ ಕಾರಣ ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.