August 15, 2025
n6767500891755149428595f2e4351982b37fe1c93c6bfa1fe9bcf9c4d1a98c5879ffbc2b07a19054f02a46

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ಗೆ ಸುಪ್ರೀಂಕೋರ್ಟ್‌ನ ಬಿಗ್ ಶಾಕ್, ಜಾಮೀನು ರದ್ದು

ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ನಟ ದರ್ಶನ್‌ ಮತ್ತೆ ಜೈಲು ಸೇರಬೇಕಾದ ಪರಿಸ್ಥಿತಿ ಉಂಟಾಗಿದೆ. ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ದ್ವಿಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ.

ಈ ತೀರ್ಪು ದರ್ಶನ್‌ನ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ರಾಜ್ಯ ಸರ್ಕಾರವು ಹೈಕೋರ್ಟ್‌ನ ಜಾಮೀನು ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ವಾದ-ಪ್ರತಿವಾದಗಳನ್ನು ವಿವರವಾಗಿ ಪರಿಗಣಿಸಿದ ನಂತರ, ಸುಪ್ರೀಂಕೋರ್ಟ್‌ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಸುಪ್ರೀಂಕೋರ್ಟ್‌, ಹೈಕೋರ್ಟ್‌ನ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. “ಹೈಕೋರ್ಟ್‌ನ ಆದೇಶದಲ್ಲಿ ಚಡಪಡಿಕೆ ಕಂಡುಬರುತ್ತದೆ. ಜಾಮೀನು ನೀಡಲು ಸಣ್ಣ ಅಂಶವನ್ನೇ ಆಧಾರವಾಗಿ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ತೆಗೆದುಕೊಳ್ಳುವಾಗ ಸರಿಯಾದ ವಿವೇಚನೆ ಬಳಸಲಾಗಿಲ್ಲ” ಎಂದು ನ್ಯಾಯಮೂರ್ತಿ ಪರ್ದಿವಾಲಾ ಅಭಿಪ್ರಾಯಪಟ್ಟಿದ್ದರು.

ಈಗ, ದರ್ಶನ್‌ನ ಜಾಮೀನು ರದ್ದಾದ್ದರಿಂದ, ಅವರಿಗೆ ಕಾನೂನು ಬಂಧನದಿಂದ ತಾತ್ಕಾಲಿಕವಾಗಿ ಬಿಡುಗಡೆ ಪಡೆಯುವ ಮಾರ್ಗ ಮುಚ್ಚಿಹೋಗಿದೆ. ಈ ಪ್ರಕರಣವು ಇನ್ನೂ ಹಲವಾರು ಕಾನೂನು ಹೋರಾಟಗಳಿಗೆ ದಾರಿ ಮಾಡಿಕೊಡಬಹುದು.

error: Content is protected !!