August 6, 2025
1200-675-21050922-thumbnail-16x9-bgdk

ದಕ್ಷಿಣ ಕನ್ನಡ: ಬೆಳ್ತಂಗಡಿಯಲ್ಲಿ ಬಹುಚರ್ಚಿತ ಕುತೂಹಲಕಾರಿ ಪ್ರಕರಣ!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರಲ್ಲಿ ಒಂದು ಅಚ್ಚರಿ ವಿಚಾರ ಹೊರಬಿದ್ದಿದೆ. ಒಂದು ವ್ಯಕ್ತಿ ತನ್ನ ಪಾಪ ಪ್ರಜ್ಞೆಗೆ ಮುಕ್ತಿ ಕಾಣಲು ವಕೀಲರ ಮೂಲಕ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದು, ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ ಮತ್ತು ದೊಡ್ಡ ಸುದ್ದಿಯಾಗಿ ಪರಿಣಮಿಸಿದೆ.

ಆ ವ್ಯಕ್ತಿ ತನ್ನ ಪತ್ರದಲ್ಲಿ, ಗ್ರಾಮದಲ್ಲಿ ನಡೆದ ಹಲವಾರು ಹತ್ಯೆ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಬರೆದುಕೊಂಡಿದ್ದಾನೆ. ಇಂತಹ ಕೃತ್ಯಗಳನ್ನು ಮುಚ್ಚಿಹಾಕಲು ಮೃತದೇಹಗಳನ್ನು ಹೂತು ಹಾಕಲಾಗುತ್ತಿತ್ತು ಎಂದು ಬರೆದಿದ್ದು, ಇನ್ನು ಮುಂದೆ ತನಿಖೆಗಾಗಿ ಪೊಲೀಸರ ಮುಂದೆ ಸತ್ಯವನ್ನು ಬಹಿರಂಗಪಡಿಸುವ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ತಿಳಿಸಿದ್ದಾನೆ.

ವಕೀಲರ ಮೂಲಕ ಬರೆದ ಪತ್ರದಲ್ಲಿ, “ನಾನು ಹೂತು ಹಾಕಿದ ಮೃತದೇಹಗಳನ್ನು ಹೊರತೆಗೆದು ಪೊಲೀಸರ ಮುಂದೆ ಒಪ್ಪಿಸುವೆ. ಇತ್ತೀಚೆಗೆ ಒಂದೇ ಮೃತದೇಹವನ್ನು ಹೊರತೆಗೆದು ಪೊಲೀಸರಿಗೆ ಒಪ್ಪಿಸಿದ್ದೇನೆ. ನಾನು ಶರಣಾಗಲು ಸಿದ್ಧನಿದ್ದೇನೆ. ಇದು ಸಾರ್ವಜನಿಕರಿಗೆ ತಿಳಿವಳಿಕೆಗೆ” ಎಂದು ಉಲ್ಲೇಖಿಸಲಾಗಿದೆ.

ಈ ಕುರಿತು ಈಗಾಗಲೇ ಪೊಲೀಸರು ಆ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವ ವಕೀಲರನ್ನು ಸಂಪರ್ಕಿಸಿ ಹೆಚ್ಚಿನ ವಿವರಗಳನ್ನು ಪಡೆದುಕೊಂಡಿದ್ದಾರೆ. ವಕೀಲರ ಪ್ರಕಾರ, “ಅವನು ಶರಣಾಗಲು ಸಿದ್ಧನಿದ್ದಾನೆ. ಆತನು ನೀಡಲಿರುವ ಮಾಹಿತಿಗೆ ಪೊಲೀಸ್ ರಕ್ಷಣೆಯು ಅಗತ್ಯ. ಸೂಕ್ತ ಭದ್ರತೆ ಒದಗಿಸಿದ ಬಳಿಕ ಆತ ಶರಣಾಗಲಿದ್ದಾನೆ” ಎಂದು ತಿಳಿಸಿದ್ದಾರೆ.

ಈ ಕುರಿತು ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಅವರು, “ಆ ವ್ಯಕ್ತಿ ಠಾಣೆಗೆ ಬಂದರೆ ಅವನಿಗೆ ರಕ್ಷಣೆ ನೀಡಲಾಗುವುದು ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪತ್ರ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆ ಹೇಗೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

error: Content is protected !!