
ಝಾನ್ಸಿ: ಮಹಿಳೆ ಹತ್ಯೆ ಹಾಗೂ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ
ಉತ್ತರ ಪ್ರದೇಶದ ಝಾನ್ಸಿಯಲ್ಲಿ 54 ವರ್ಷದ ಮಹಿಳೆ ಸುಶೀಲಾ ದೇವಿಯ ಹತ್ಯೆ ಮತ್ತು ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಮಹಿಳೆಯ ಸೊಸೆ ಪೂಜಾ ಮತ್ತು ಆಕೆಯ ಸಹೋದರಿ ಕಮಲಾವನ್ನು ಪೊಲೀಸರು ಬಂಧಿಸಿದ್ದಾರೆ.
ಪೂಜಾ, ಪತಿ ಮೃತರಾದ ಬಳಿಕ ಅವರ ಇಬ್ಬರು ಸಹೋದರರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಜೊತೆಗೆ ಸುಶೀಲಾ ದೇವಿಯ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಪೂಜಾ, ಕಮಲಾ ಮತ್ತು ಕಮಲಾಳ ಪ್ರಿಯಕರ ಅನಿಲ್ ವರ್ಮಾ ಜೊತೆಗೂಡಿ ಕೊಲೆಯ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ನಂತರ, ಮೂವರು ಒಟ್ಟು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದರು. ಕದ್ದ ಆಭರಣಗಳನ್ನು ಮಾರಲು ಅನಿಲ್ ವರ್ಮಾ ತೆರಳುತ್ತಿದ್ದಾಗ ಪೊಲೀಸರು ಅಲ್ಲಿಗೆ ಧಾವಿಸಿದ್ದರು. ಆಗ ವರ್ಮಾ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿ ಅವನನ್ನು ಬಂಧಿಸಿದ್ದಾರೆ.
ಪ್ರಸ್ತುತ, ಪೂಜಾ ಮತ್ತು ಕಮಲಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.