
ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕೊಂಚಾಡಿಯ ಓಂಶ್ರೀ (24) ಹಾಗೂ ಮಲ್ಲಿಕಟ್ಟೆಯ ಅಮನ್ ರಾವ್ (23) ಎಂದು ಗುರುತಿಸಲಾಗಿದೆ. ಓಂಶ್ರೀ ಅವರು ದಕ್ಷಿಣ ಕನ್ನಡ ಜಿಲ್ಲಾ ಎನ್ಎಸ್ಯುಐ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಪಘಾತ ಸಮಯದಲ್ಲಿ ಕಾರಿನಲ್ಲಿ ನಾಲ್ಕು ರಿಂದ ಐದು ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, ಕಾರು ಚಾಲನೆಯಲ್ಲಿದ್ದ ವ್ಯಕ್ತಿಯು ಅಮನ್ ರಾವ್ ಆಗಿರುವುದಾಗಿ ತಿಳಿದು ಬಂದಿದೆ.ಡಿ ಕಡೆಯಿಂದ ಪಂಪ್ವೆಲ್ ದಿಕ್ಕಿಗೆ ಸಾಗುತ್ತಿದ್ದ ಕಾರು, ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಈ ದುರ್ಘಟನೆ ಮಂಗಳವಾರ ತಡರಾತ್ರಿ ಸುಮಾರು 2.30ರ ಹೊತ್ತಿಗೆ ಸಂಭವಿಸಿದೆ.
ಅಪಘಾತದ ತೀವ್ರತೆ ಬಹಳ ಭೀಕರವಾಗಿದ್ದು, ಕಾರು ಸಂಪೂರ್ಣ ನಾಶವಾಗಿದ್ದು, ಇಂಜಿನ್ ಭಾಗವೇ ಹೊರಗೆ ಬೀಳುವಷ್ಟು ಝೋರ್ದಾರ ಡಿಕ್ಕಿ ಸಂಭವಿಸಿದೆ. ಕಾರಿನ ಏರ್ಬ್ಯಾಗ್ಗಳು ಚಿಂದಿ ಚಿಂದಿಯಾಗಿವೆ.
ಕಾರಿನಲ್ಲಿದ್ದ ಇಟಲಿಯ ಪ್ರಜೆ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.