
ಬೆಳ್ತಂಗಡಿ:
ಪೊಲೀಸ್ ಠಾಣೆಯಲ್ಲಿರುವ ಪ್ರಕರಣವನ್ನು ಇತ್ಯರ್ಥ ಮಾಡುವುದಾಗಿ ಹೇಳಿ ಹಣ ಪಡೆದು ವಂಚನೆ ನಡೆಸಿದ ಆರೋಪದ ಮೇಲೆ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಮಡಂತ್ಯಾರ್ನ ಮಾಲಾಡಿ ನಿವಾಸಿ ಕೆ.ರಾಜೇಶ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ರಾಜೇಶ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬಗೆಹರಿಸುವುದಾಗಿ ಹೇಳಿ ಸಂಧ್ಯಾ ಹಣ ಪಡೆದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
2024ರಲ್ಲಿ ಫೇಸ್ಬುಕ್ ಮೂಲಕ ರಾಜೇಶ್ ಹಾಗೂ ಸಂಧ್ಯಾ ಪರಸ್ಪರ ಪರಿಚಯವಾಗಿದ್ದು, ತಾನು ಹೆಲ್ಪ್ಲೈನ್ ಮೂಲಕ ವಂಚನೆಗೊಳಗಾದವರಿಗೆ ಸಹಾಯ ಮಾಡುತ್ತೇನೆ, ಅಮಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಬಗೆಹರಿಸಿರುತ್ತೇನೆ ಎಂದು ಸಂಧ್ಯಾ ಹೇಳಿದ್ದಾರೆ.
ಬಂಟ್ವಾಳ ಠಾಣೆಯಲ್ಲಿದ್ದ ಪ್ರಕರಣವನ್ನು ಹೈಕೋರ್ಟ್ನಲ್ಲಿ ಬಗೆಹರಿಸುತ್ತೇನೆ ಆದರೆ ಕೆಲವೆ ಖರ್ಚು ಆಗುತ್ತದೆ ಎಂದು ಹೇಳಿ ಹಂತ ಹಂತವಾಗಿ ಸಂಧ್ಯಾ 3.20 ಲಕ್ಷ ರೂ. ಪಡೆದಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಹಣ ನೀಡಿದ ಬಳಿಕವೂ ಸಮಸ್ಯೆ ಬಗೆಹರಿಯದ ಕಾರಣ ರಾಜೇಶ್ ಅವರು ಪ್ರಶ್ನೆ ಕೇಳಿದಾಗ, ಸಂಧ್ಯಾ ಇನ್ನೂ ಹೆಚ್ಚಿನ ಹಣ ಕೇಳಿದ್ದಾಳೆ.
ಇದರಿಂದ ಶಂಕಿತನಾದ ರಾಜೇಶ್ ಅವರು ಕೋರ್ಟ್ ದಾಖಲೆಗಳನ್ನು ಕೇಳಿದ್ದಾಗ, ಸಂಧ್ಯಾ ಅವರಿಗೆ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ಪೊಲೀಸರು ಭಾರತೀಯ ನ್ಯಾಯ ಸಂಕೇತದ (BNS) 318(4) ಮತ್ತು 351(2) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.