
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಕ್ಷಿ-ದೂರುದಾರರು ಸೂಚಿಸಿದ ಸಮಾಧಿ ಸ್ಥಳಗಳಲ್ಲಿ ಅಗೆಯುವ ಕಾರ್ಯವನ್ನು ವಿಶೇಷ ತನಿಖಾ ತಂಡ (ಎಸ್.ಐ.ಟಿ) ನಡೆಸುತ್ತಿದೆ. ಪಾಯಿಂಟ್ 11ರ ಬಳಿಯಲ್ಲಿ ಮಾನವ ಅಸ್ಥಿಪಂಜರದ ಅವಶೇಷಗಳು ದೊರಕಿವೆ.
ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ, ಎಸ್.ಐ.ಟಿ ಅಧಿಕಾರಿಗಳು ಮತ್ತು ದೂರುದಾರರು ಧರ್ಮಸ್ಥಳ ಗ್ರಾಮದ ಹೆದ್ದಾರಿ ಪಕ್ಕದ ಅರಣ್ಯ ಪ್ರದೇಶವನ್ನು ಪ್ರವೇಶಿಸಿ, ಸ್ಥಳ ಸಂಖ್ಯೆ 11ರಲ್ಲಿ ಅಗೆಯುವ ಕಾರ್ಯವನ್ನು ಪುನರಾರಂಭಿಸಿದ್ದರು. ಆದರೆ, ಗುರುತಿಸಿದ ಸಮಾಧಿ ಸ್ಥಳವನ್ನು ಬಿಟ್ಟು ತಂಡವು ಕಾಡಿನ ಆಳಕ್ಕೆ ಹೋಗಿದ್ದು, ಅಲ್ಲಿ ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪಾಯಿಂಟ್ 11ರ ಬಳಿ ಸಮಾಧಿ ಅಗೆದ ಸ್ಥಳದಲ್ಲಿ ಅಸ್ಥಿಪಂಜರ ಸಿಕ್ಕಿದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ಥಳದಲ್ಲಿ ಪುರುಷನದ್ದೆಂದು ಶಂಕಿಸಲಾದ ಮಾನವ ಅಸ್ಥಿಪಂಜರ ಅವಶೇಷಗಳು, ಹಗ್ಗ ಮತ್ತು ಕೆಲವು ಬಟ್ಟೆಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ಸಾವಿನ ನಿಖರ ಕಾರಣವನ್ನು ನಿರ್ಧರಿಸಲು ಈ ಅವಶೇಷಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಕಳುಹಿಸಲಾಗುವುದು. ಪೊಲೀಸರು ಇದು ಆತ್ಮಹತ್ಯೆಯ ಪ್ರಕರಣವೆಂದು ಶಂಕಿಸುತ್ತಿದ್ದಾರೆ.