
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರದ ನಿಯೋಜಿತ ವಿಶೇಷ ತನಿಖಾ ತಂಡ (ಎಸ್ಐಟಿ) ಮಂಗಳೂರಿಗೆ ಆಗಮಿಸಿದ್ದು, ಇದರಿಂದ ಪ್ರಕರಣದ ಅಧಿಕೃತ ತನಿಖೆ ಪ್ರಾರಂಭವಾಗಿದೆ.
ತನಿಖಾ ತಂಡದ ಭಾಗವಾಗಿ ಡಿಐಜಿ ಎಂ.ಎನ್. ಅನುಚೇತ್ ಮಂಗಳೂರಿಗೆ ಆಗಮಿಸಿ, ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಮುಖ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್. ಅನುಚೇತ್ ಹಾಗೂ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ತನಿಖಾ ತಂಡದ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಈ ಇಬ್ಬರು ಅಧಿಕಾರಿಗಳು ಶನಿವಾರ ಮಂಗಳೂರಿಗೆ ಆಗಮಿಸಿ, ನಗರದಲ್ಲಿ ಎರಡು ಪ್ರಮುಖ ಸಭೆಗಳನ್ನು ನಡೆಸಿದರು. ಅದರಲ್ಲಿ, ಧರ್ಮಸ್ಥಳ ಪ್ರಕರಣದ ಸಂಬಂಧ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪೊಲೀಸರನ್ನೊಳಗೊಂಡ ತಂಡದೊಂದಿಗೆ ಮಂಗಳೂರು ಸರ್ಕ್ಯೂಟ್ ಹೌಸ್ನಲ್ಲಿ ಸಭೆ ನಡೆದಿತು. ಬಳಿಕ, ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಅವರ ಕಚೇರಿಯಲ್ಲಿ ಪ್ರತ್ಯೇಕ ಸಮಾಲೋಚನೆ ಕೂಡ ನಡೆಯಿತು.
ಎಸ್ಐಟಿಗೆ ಇನ್ಸ್ಪೆಕ್ಟರ್ಗಳು, ಸಬ್ಇನ್ಸ್ಪೆಕ್ಟರ್ಗಳು, ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ಗಳನ್ನು ಒಳಗೊಂಡು ಒಟ್ಟು 20 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಪ್ರಾಥಮಿಕ ಸಭೆಯಲ್ಲಿ ಈ ಪೈಕಿ 12 ಮಂದಿ ಭಾಗವಹಿಸಿದ್ದರೆಂದು ಮೂಲಗಳು ತಿಳಿಸಿವೆ. ಉಳಿದ ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ತನಿಖಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಡಿಐಜಿ ಅನುಚೇತ್ ತಿಳಿಸಿದ್ದಾರೆ ಎನ್ನಲಾಗಿದೆ.