August 6, 2025
025-03-19 at 9.44.39 PM

ಕರ್ನಾಟಕದ ಅಧಿಕೃತ ಭಾಷೆ ಕನ್ನಡವಾಗಿದ್ದು, ಇಂಗ್ಲೀಷ್ ಹೆಚ್ಚುವರಿ ಅಧಿಕೃತ ಭಾಷೆಯಾಗಿದೆ. ಇದೀಗ, ಪ್ರಾಚೀನ ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಸೇರಿಸುವ ಒತ್ತಾಯ ಮತ್ತಷ್ಟು ಬಲಗೊಂಡಿದೆ.

ವಿಧಾನಸಭೆಯ ಬಜೆಟ್ ಅಧಿವೇಶನದ ಕರಾವಳಿ ಪ್ರತ್ಯೇಕ ಚರ್ಚೆಯಲ್ಲಿ, ಈ ಭಾಗದ ಶಾಸಕರು ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕೆಂದು ಒತ್ತಿ ಹೇಳಿದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತುಳು ಭಾಷೆಯಲ್ಲಿ ಮಾತನಾಡಿ, ತುಳುವಿಗೆ ಅಧಿಕೃತ ಗೌರವ ದೊರೆಯಬೇಕೆಂದು ಆಗಲೇ ಗಮನಸೆಳೆದಿದ್ದರು. ಇದೀಗ, ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕರಾವಳಿಯವರೇ ಆಗಿರುವ ಸ್ಪೀಕರ್ ಯು.ಟಿ. ಖಾದರ್ ಅವರ ಅನುಕೂಲಸ್ಥಿತಿಯಿಂದ ಹೆಚ್ಚಿನ ನಿರೀಕ್ಷೆಗಳು ಮೂಡಿವೆ.

ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಪ್ರಯತ್ನ

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸಲು ಪ್ರಯತ್ನಗಳು ದೀರ್ಘಕಾಲದಿಂದ ನಡೆಯುತ್ತಲೇ ಇವೆ. ರಾಜ್ಯದ ಮಟ್ಟದಲ್ಲಿ ತುಳುವಿಗೆ ಅಧಿಕೃತ ಸ್ಥಾನಮಾನ ಸಿಗುವುದಾದರೆ, 8ನೇ ಪರಿಚ್ಛೇಧಕ್ಕೆ ಸೇರ್ಪಡೆಯಾಗಲು ಸಾಧ್ಯತೆ ಹೆಚ್ಚಾಗಲಿದೆ.

ಕಂಬಳ ಕಾರ್ಯಕ್ರಮದಲ್ಲಿ ಸಿಎಂ ಹೇಳಿಕೆ

ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಪರಿಗಣಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಹೇಳಿದರು. ಈ ಹೇಳಿಕೆ ತುಳು ಭಾಷಾಭಿಮಾನಿಗಳಿಗೆ ಹೊಸ ಉತ್ಸಾಹ ನೀಡಿದ್ದು, ಈ ವಿಷಯದ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.

ಜಾಗತಿಕವಾಗಿ ಬೆಳೆಯುತ್ತಿರುವ ತುಳು

ಸ್ಪೀಕರ್ ಯು.ಟಿ. ಖಾದರ್ ಅವರು ತುಳು ಪ್ರಾಚೀನ ಭಾಷೆಯಾಗಿದ್ದು, ಶತಮಾನಗಳಿಂದ ಬಳಕೆಯಲ್ಲಿದೆ ಎಂಬುದನ್ನು ಒತ್ತಿಹೇಳಿದರು. ಕೇವಲ ಕರಾವಳಿಯಲ್ಲಷ್ಟೇ ಅಲ್ಲದೆ, ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು, ಕೇರಳ ಮತ್ತು ಗಲ್ಫ್ ದೇಶಗಳಲ್ಲಿಯೂ ತುಳುವು ಹರಡಿದೆ. ಅಲ್ಲದೆ, ಹಲವು ದೇಶಗಳಲ್ಲಿ ತುಳು ಸಂಘಟನೆಗಳಿವೆ. ತುಳು ಭಾಷಿಕರು ಉದ್ಯಮ, ವಾಣಿಜ್ಯ, ರಂಗಭೂಮಿ, ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಪ್ರಧಾನ ಭಾಷೆಯಾದರೂ, ಕರಾವಳಿಯಲ್ಲಿ ತುಳು ವ್ಯಾಪಕ ಬಳಕೆಯಲ್ಲಿದೆ. ಅಲ್ಲದೆ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳೊಂದಿಗೆ ಸಹಬಾಳ್ವೆ ನಡೆಸಿದೆ. ಒಂದು ಅಂದಾಜು ಪ್ರಕಾರ, ಜಗತ್ತಿನಾದ್ಯಂತ 1 ಕೋಟಿ ಜನರು ತುಳುವನ್ನು ಮಾತನಾಡುತ್ತಾರೆ. ಆದರೆ, ಜನಗಣತಿ ದಾಖಲೆಗಳಲ್ಲಿ ತುಳುವಿಗೆ ಅಧಿಕೃತ ಸ್ಥಾನಮಾನ ಇಲ್ಲದಿರುವುದರಿಂದ, ಇದರ ಖಚಿತ ಲೆಕ್ಕ ಇಲ್ಲ.

ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ಭಾಷೆಗಾಗಿ ಹೋರಾಟ

ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನಕ್ಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ, ತಜ್ಞರ ಸಮಿತಿಯು ಕರೆಯಲಾಗಿತ್ತು. ಡಾ. ಎಂ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಕೇಶವ ಬಂಗೇರ, ಡಾ. ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರ್, ಪೃಥ್ವಿರಾಜ್ ಕವತ್ತಾರು, ವಸಂತ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು, ಸಂಧ್ಯಾ ಆಳ್ವ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಈ ಸಮಿತಿಯಲ್ಲಿ ಭಾಗಿಯಾಗಿದ್ದರು. ಸಮಿತಿಯು ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ಒದಗಿಸಿತು.

ಹೆಚ್ಚುವರಿ ಅಧಿಕೃತ ಭಾಷೆ ಆಗುವುದರಿಂದ ಲಾಭವೇನು?

ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ದೊರೆತರೆ, ನಾನಾ ವಿಧದ ಪ್ರಯೋಜನಗಳು ಲಭ್ಯವಾಗಲಿವೆ.

  1. ಸರ್ಕಾರಿ ಆಡಳಿತ: ಆದೇಶಗಳು ಕನ್ನಡ ಮತ್ತು ತುಳುವಿನಲ್ಲಿ ಪ್ರಕಟಗೊಳ್ಳಬಹುದು.
  2. ಶಿಕ್ಷಣ: ಶಾಲಾ ಶಿಕ್ಷಣದಲ್ಲಿ, ಮೊದಲನೇ ತರಗತಿಯಲ್ಲಿಯೇ ಐಚ್ಛಿಕವಾಗಿ ತುಳು ಕಲಿಯಲು ಅವಕಾಶ ದೊರೆಯುತ್ತದೆ.
  3. ವಿಧಾನಮಂಡಲದಲ್ಲಿ ಬಳಕೆ: ಶಾಸಕರು ತುಳುವಿನಲ್ಲಿ ಪ್ರಶ್ನೆಗಳನ್ನು ಕೇಳಲು ಮತ್ತು ಉತ್ತರ ಪಡೆಯಲು ಸಾಧ್ಯವಾಗುತ್ತದೆ.
  4. ಸಾಂಸ್ಕೃತಿಕ ಪ್ರಭಾವ: ತುಳು ರಂಗಭೂಮಿ, ಚಿತ್ರೋದ್ಯಮ, ಸಾಹಿತ್ಯಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ.
  5. ಭಾಷಾ ಗೌರವ: ಜಾಗತಿಕ ಮಟ್ಟದಲ್ಲಿ ತುಳು ಭಾಷಿಕರಿಗೆ ಹೆಮ್ಮೆ ಹಾಗೂ ಗೌರವ ಹೆಚ್ಚಾಗುತ್ತದೆ.

ತುಳುವಿಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಗೌರವ ದೊರೆತರೆ, ಇದು ಕೇವಲ ಭಾಷೆಗೆ ಮಾತ್ರವಲ್ಲದೆ, ತುಳು ಸಂಸ್ಕೃತಿ, ಪರಂಪರೆಯ ಜಾಗೃತಿಗೆ ದೊಡ್ಡ ಹೆಜ್ಜೆಯಾಗಲಿದೆ.

error: Content is protected !!