
ಬೈಲೂರು: ವೈಷಮ್ಯದ ಹಿನ್ನೆಲೆಯಿಂದ ಯುವಕನ ಮೇಲೆ ಹಲ್ಲೆ ಯತ್ನ, ಜಾತಿ ನಿಂದನೆ ಪ್ರಕರಣ ದಾಖಲು
ಬೈಲೂರು ಸಮೀಪದ ಕೌಡೂರು ಗ್ರಾಮದ ಚರಣ್ (22) ಮತ್ತು ಆರೋಪಿಗಳಾದ ವಿಷ್ಣು ಹಾಗೂ ಅಶ್ವಿನ್ ನಡುವೆ ಜೂನ್ 21ರಂದು ಬೈಲೂರಿನ ಪಳ್ಳಿ ಕ್ರಾಸ್ ಬಳಿ ರಾತ್ರಿ 8.30ರ ಸುಮಾರಿಗೆ ಜಗಳ ಸಂಭವಿಸಿದೆ.
ಜಗಳದ ನಂತರ ವೈಯಕ್ತಿಕ ದ್ವೇಷದಿಂದ ಅಶ್ವಿನ್, ಚರಣ್ ಗೆ ದೂರವಾಣಿ ಮೂಲಕ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾನೆ. ಆತನಿಗೆ ಜೀವ ಬೆದರಿಕೆ ನೀಡಿದ ಅಶ್ವಿನ್, ಪುನ: ಪುನಃ ಕರೆಮಾಡಿ ‘ಜೋಡುರಸ್ತೆಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಬೆದರಿಸಿದ್ದಾನೆ.
ಇದರಿಂದ ಆತಂಕಗೊಂಡ ಚರಣ್ ರಾತ್ರಿ 7.45ರ ಸುಮಾರಿಗೆ ತನ್ನ ಚಿಕ್ಕಪ್ಪ ಜಗನ್ನಾಥ್, ಸುಂದರ್, ಕಿರಣ್, ರವಿ ಮತ್ತು ಮತ್ತೊಬ್ಬ ಕಿರಣ್ ಅವರೊಂದಿಗೆ ರಂಗಪಲ್ಕೆಯ ಕೀರ್ತಿ ಬಾರ್ ಬಳಿ ನಿಂತುಕೊಂಡಿದ್ದ.
ಅಷ್ಟರಲ್ಲಿ ಬೈಲೂರಿನ ಸುಜಿತ್, ವಿಷ್ಣು, ಅಶ್ವಿನ್, ಮಂಜುನಾಥ ಜಾರ್ಕಳ, ಯಶವಂತ್ ಹಾಗೂ ಇತರರು ಬೈಕಿನಲ್ಲಿ ಅಲ್ಲಿ ಬಂದು ಚರಣ್ ಜತೆ ಗಲಾಟೆ ಆರಂಭಿಸಿದ್ದಾರೆ.
ಈ ವೇಳೆ ವಿಷ್ಣು ತನ್ನ ಕೈಯಲ್ಲಿ ತಲವಾರು ಹಿಡಿದು ಚರಣ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಜಗನ್ನಾಥ್ ಮತ್ತು ಸುಂದರ್ ಮಧ್ಯೆ ಬಂದು ತಡೆಯಲು ಹೋದಾಗ, ವಿಷ್ಣು ಜಗನ್ನಾಥ್ ಅವರ ಮುಖಕ್ಕೆ ಕೈಯಿಂದ ಹೊಡೆದು, ಅವರ ಎಡಬದಿಯ ಹಲ್ಲು ಮುರಿಯುವಂತೆ ಮಾಡಿದ್ದಾನೆ. ಜೊತೆಗೆ ಸುಜಿತ್ ಮತ್ತು ವಿಷ್ಣು ಇಬ್ಬರೂ ಸುಂದರ್ ಅವರ ಎದೆಗೆ ಕೈಯಿಂದ ಹೊಡೆದಿದ್ದಾರೆ ಎಂದು ಚರಣ್ ನೀಡಿದ ದೂರು ಸ್ಪಷ್ಟಪಡಿಸುತ್ತದೆ.